29/06/2026 12:34 PM Total Views: 121473

“ಅಧಿಕಾರಶಾಹಿಯ ನಿದ್ದೆ, ಸೈಕಲ್ ರಿಕ್ಷಾ ಹೊತ್ತ ಮುದುಕ: ಇದು ಗಂಗಾವತಿಯ ‘ ಪಬ್ಲಿಕ್ ಪವರ್’ ಕಥೆ!”
ತಾಜಾ ಹಾಗು ನಿಖರ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ನ್ನು ಸಬ್ ಸ್ಕ್ರೈಬ್ ಮಾಡಿ

ಒಮ್ಮೆ ಈ ಚಿತ್ರವನ್ನು ದಿಟ್ಟಿಸಿ ನೋಡಿ.
ಕೆದರಿದ ಕೂದಲು, ಮೈತುಂಬಾ ಧೂಳು, ಹರಿದ ಚಪ್ಪಲಿ ಮೆಟ್ಟಿಕೊಂಡ ಆ ಮುದುಕನ ಮುಖದಲ್ಲೊಂದು ಸಣ್ಣ ನಗುವಿದೆ. ಆದರೆ ಆ ನಗುವಿನ ಹಿಂದೆ ವ್ಯವಸ್ಥೆಯ ನಾಚಿಕೆಗೆಟ್ಟ ನಗ್ನ ಸತ್ಯವಿದೆ!

ಇದು ಗಂಗಾವತಿ ನಗರಸಭೆಯ ವ್ಯಾಪ್ತಿಯ ಹರಕು ಮುರುಕು ರಸ್ತೆಯೊಂದರ ದೃಶ್ಯ. ಕಣ್ಣೆದುರೇ ಕಾಣುವ ಆ ಮೃತ್ಯುಕೂಪಗಳು, ಆ ತೆಗ್ಗು-ಗುಂಡಿಗಳು ದಿನ ಬೆಳಗಾದರೆ ಯಾರದ್ದೋ ಕೈಕಾಲು ಮುರಿಯುತ್ತವೆ, ಇನ್ಯಾರದ್ದೋ ಪ್ರಾಣ ಹಿಂಡುತ್ತವೆ. ಆದರೆ, ಎಸಿ ರೂಮಿನಲ್ಲಿ ಕೂತು ಕಡತಗಳಿಗೆ ಸಹಿ ಹಾಕುವ ಸಾಹೇಬರಿಗಾಗಲಿ, ವೋಟು ಕೇಳುವಾಗ ಕೈಮುಗಿದು ಬರುವ ನಾಯಕರಿಗಾಗಲಿ ಇದು ಕಾಣಿಸುವುದೇ ಇಲ್ಲ. ಸರ್ಕಾರ ಅನುದಾನ ಹಂಚಿಕೆ ಮಾಡಿಲ್ಲವಂತೆ! ಸ್ಥಳೀಯ ಶಾಸಕರು, ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ. ‘ಅನುದಾನ ಇಲ್ಲ, ಗಂಗಾವತಿಯನ್ನು ಸುಂದರೀಕರಣ ಮಾಡಲು ಆಗುತ್ತಿಲ್ಲ’ ಎಂಬುದು ಅವರ ಸವಕಲು ಸಬೂಬು.

ಇತ್ತ ರಸ್ತೆ ಅಗಲೀಕರಣಕ್ಕೆ ನೂರೆಂಟು ನೆಪಗಳನ್ನು ಹುಡುಕುವ ಇದೇ ಅಧಿಕಾರಿಗಳ ಕಣ್ಣಿಗೆ ನಗರದ ಅಸಲಿ ದಂಧೆಗಳು ಮಾತ್ರ ಕಾಣಿಸುವುದೇ ಇಲ್ಲ!
ನಗರದ ರಸ್ತೆಗಳನ್ನೇ ನುಂಗಿ, ಫುಟ್ಪಾತ್ಗಳನ್ನು ಕಬಳಿಸಿ ರಾಜಾರೋಷವಾಗಿ ನಿಂತಿರುವ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳ ತಂಟೆಗೆ ಹೋಗಲು ಇವರ ಮೈ ನಡುಗುತ್ತದೆ. ಆ ಬಲಾಢ್ಯರ ಕಟ್ಟಡಗಳನ್ನು ತೆರವು ಮಾಡುವ ಧೈರ್ಯ ಈ ಸಬೂಬು ಆಸಾಮಿಗಳಿಗೆ ಇಲ್ಲ. ಆದರೆ, ಅದೇ ರಸ್ತೆ ಪಕ್ಕದಲ್ಲಿ ಹೊಟ್ಟೆಪಾಡಿಗಾಗಿ ಬಡವನೊಬ್ಬ ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡಿದ್ದರೆ ಸಾಕು,

ಇವರ ಬುಲ್ಡೋಜರ್ಗಳು ಗರ್ಜಿಸುತ್ತಾ ಓಡಿ ಬರುತ್ತವೆ! ಬಡವರ ಬದುಕನ್ನು ಮೊದಲು ತೆರವು ಮಾಡುವ ಈ ಅಧಿಕಾರಿಗಳ ಕಾನೂನು, ಆ ಶೋಕಿಗಾರರ ವಾಣಿಜ್ಯ ಮಳಿಗೆಗಳ ಮುಂದೆ ಮಾತ್ರ ಕೈಕಟ್ಟಿ ನಿಲ್ಲುತ್ತದೆ.
ಇಂಥ ನಾಟಕಗಳ ಮಧ್ಯೆ, ಈ ಮುದುಕನಿಗೆ ಆ ಸಬೂಬುಗಳು, ತಾರತಮ್ಯಗಳು ಗೊತ್ತಿಲ್ಲ ಸಾರ್. ಆತನಿಗೆ ಗೊತ್ತಿರುವುದು ಒಂದೇ—ತನ್ನ ಕಣ್ಣೆದುರು ಯಾವೊಬ್ಬ ಬಡವನೂ ಬಿದ್ದು ಪ್ರಾಣ ಬಿಡಬಾರದು!
ನಗರ ಸಭೆಯವರು ಸಾಕಷ್ಟು ಬಾರಿ ಬಂದು ಕಣ್ಣೊರೆಸುವ ತಂತ್ರವಾಗಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ಹೋಗಿದ್ದಾರೆ. ಮಳೆ ಬಂದಾಗ ಆ ಮಣ್ಣು ಕೊಚ್ಚಿ ಹೋಗಿ ಮತ್ತೆ ಅದೇ ರಕ್ತ ಹೀರುವ ಗುಂಡಿಗಳು ತಲೆ ಎತ್ತಿವೆ. ಶಾಶ್ವತ ಪರಿಹಾರ ಕೊಡುವ ಯೋಗ್ಯತೆ ಈ ಮೂರ್ಖ ವ್ಯವಸ್ಥೆಗೆ ಇಲ್ಲದೇ ಹೋದಾಗ, ಈ ವೃದ್ಧ ತನ್ನ ಹರಿದ ಸೈಕಲ್ ರಿಕ್ಷಾವನ್ನು ಎಳೆದುಕೊಂಡು ರಸ್ತೆಗಿಳಿದಿದ್ದಾನೆ. ಕಲ್ಲು-ಮಣ್ಣುಗಳನ್ನು ತಾನೇ ಹೊತ್ತು ತಂದು, ತನ್ನ ರಕ್ತದ ಬೆವರಿನಿಂದ ಆ ಗುಂಡಿಗಳನ್ನು ಮುಚ್ಚುತ್ತಿದ್ದಾನೆ.
ಇದು ಕೇವಲ ರಸ್ತೆಯ ಗುಂಡಿ ಮುಚ್ಚುತ್ತಿರುವ ದೃಶ್ಯವಲ್ಲ; ಗಂಗಾವತಿ ನಗರಸಭೆಯ ಅಧಿಕಾರಿಗಳ ತಾರತಮ್ಯ ನೀತಿಗೆ ಮತ್ತು ಸರ್ಕಾರದ ಆಡಳಿತ ದುರಂತಕ್ಕೆ ಬಿದ್ದಿರುವ ದೊಡ್ಡ ತೇಪೆ!
ಬಲಾಢ್ಯರಿಗೆ ಮಣಿಯುವ ಅಧಿಕಾರಿಗಳ ಮಧ್ಯೆ, ಜನಸಾಮಾನ್ಯರ ಪ್ರಾಣ ಕಾಯಲು ನಿಂತಿರುವ ಈ ವೃದ್ಧನ ಪ್ರಾಮಾಣಿಕತೆಯ ಮುಂದೆ ಇಡೀ ವ್ಯವಸ್ಥೆಯೇ ತಲೆ ತಗ್ಗಿಸಿ ನಿಲ್ಲಬೇಕು. ಸಾಹೇಬರೇ, ಬಡವರ ಮೇಲೆ ಮಾತ್ರ ಬುಲ್ಡೋಜರ್ ಹರಿಸುವ ನಿಮ್ಮ ಕುರ್ಚಿಗಳಿಗೆ ಈ ಸೈಕಲ್ ರಿಕ್ಷಾದ ಚಕ್ರಗಳು ಸವಾಲು ಹಾಕುತ್ತಿವೆ, ಗಮನಿಸಿ!
ಒಂದೇ ರಸ್ತೆಗೆ ಮೂರು ಇಲಾಖೆಗಳಿಂದ ರಸ್ತೆ ಕಾಮಗಾರಿ ಮಂಜೂರು ಈಗಾಗಲೇ ಒಂದು ಇಲಾಖೆಯಿಂದ ಭೂಮಿ ಪೂಜೆ ನೆರವೇರಿದ್ದು ಯಾವ ಇಲಾಖೆ ಕೆಲಸಮಾಡಲಿದೆ ಯಾವ ಇಲಾಖೆಗಳು ಬಿಲ್ಲು ಎತ್ತುವಳಿ ಮಾಡಲಿವೆ ಕಾದು ನೋಡಬೇಕಿದೆ…












